Saturday 28 February 2009

ಮಾಮೂಲಿ ಗಾಂಧಿ

ಆತ್ಮೀಯ ಸ್ನೇಹಿತ ಕಲಿಗಣನಾಥ ಗುಡುದೂರ ರ ಕಥಾಸಂಕಲನ ಬಿಡುಗಡೆ ನಾಳೆ,ಅವರು ಯಾವಾಗಲು ಹೀಗೆ ಬರೆಯುತ್ತಿರಲೆಂದು ಹಾರೈಕೆ.




ನನ್ನೊಳಗಿನ ಹಿರಿಯ ಜೀವವೆಂಬ ಮೋಹನ್ ಸರ್,
ನಮಸ್ಕಾರಗಳು. ನಿಮ್ಮ ಪ್ರೀತಿಯಿಂದ ನಾನು ಕನ್ನಡ ಕಥಾಲೋಕಕ್ಕೆ ಪರಿಚಯವಾಗಿದ್ದನ್ನು ಎಂದೆಂದೂ ಮರೆಯಲಾರದ್ದು. ನಿಮ್ಮ ಸಲಹೆ, ಪ್ರೀತಿಯನ್ನುಂಡು ಬರೆಯುತ್ತಿರುವೆ. ಮಾ.೧ರಂದು ನನ್ನ ಮೂರನೇ ಕಥಾ ಸಂಕಲನ ಬಿಡುಗಡೆಯಾಗಲಿದೆ. ನಿಮ್ಮೊಂದಿಗೆ ಈ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ನಿಮ್ಮವ
ಕಲಿಗಣನಾಥ ಗುಡದೂರು

’ಮಾಮೂಲಿ ಗಾಂಧಿ’ ಮಾ.೧ರಂದು ಬಿಡುಗಡೆಯಾಗುತ್ತಿದೆ...
ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. ’ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...’ ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಮಾ.೧,೨೦೦೯ರಂದು ’ಮಾಮೂಲಿ ಗಾಂಧಿ’ ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ ಅನುಭವಿಸಿದ ತಲ್ಲಣಗಳ ಮರೆಯಲು ’ಮಾಮೂಲಿ ಗಾಂಧಿ’ ಕಥೆಗಳನ್ನು ರಚಿಸಿದ್ದೇನೆ. ಇಲ್ಲಿ ಬರೆದ ಬಹುತೇಕ ಕಥೆಗಳು ಹೊಚ್ಚ ಹೊಸವು. ಮೊದಲನೇ ಕಥಾ ಸಂಕಲನ ’ಉಡಿಯಲ್ಲಿಯ ಉರಿ’ ಇನ್ನೂ ಈಗಲೂ ತನ್ನ ಕಿಚ್ಚನ್ನು ಹೊತ್ತಿಸುತ್ತಿದೆ ಎಂಬುದಕ್ಕೆ ಫೆ.೨೬ರಂದು ’ಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಥಾಲೋಕ ಅಂಕಣದಲ್ಲಿ ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಉಡಿಯಲ್ಲಿಯ ಉರಿ ಬಗ್ಗೆ ಮತ್ತೊಮ್ಮೆ ಆಪ್ತವಾಗಿ ಬರೆದು, ನನ್ನಂತ ಕಥೆಗಾರರ ಕಥೆಗಳನ್ನು ಓದುವ, ವಿಮರ್ಶಿಸುವ ಹೃದಯವಂತಿಕೆ ಹಿರಿಯರಲ್ಲಿ ಬೆಳೆಯಬೇಕು ಎಂಬುದನ್ನು ಹೇಳಿದ್ದಾರೆ. ಎರಡನೇ ಕಥಾ ಸಂಕಲನ ’ಮತಾಂತರ’ದ ಪ್ರತಿಗಳಿಗಾಗಿ ಈಗಲೂ ಅನೇಕರು ಕೇಳುತ್ತಿರುತ್ತಾರೆ. ಆದರೆ ಪ್ರತಿಗಳೆಲ್ಲಾ ಮುಗಿದಿವೆ. ಎರಡು ಕಥಾ ಸಂಕಲನಗಳಲ್ಲಿದ್ದ ಕಥೆಗಳಿಗಿಂತ ಒಂದಷ್ಟು ಮಟ್ಟಿಗೆ ಕಥಾ ಹಂದರದಲ್ಲಿ ಹೊಸತನ ಸಾಧಿಸುವ ಪ್ರಯತ್ನ ’ಮಾಮೂಲಿ ಗಾಂಧಿ’ ಕಥಾಸಂಕಲನದಲ್ಲಿ ಮೂರ್ತ ರೂಪ ತಾಳಿದೆ. ಫೆಬ್ರುವರಿ-೦೯ರ ಮಯೂರದಲ್ಲಿ ’ಕನ್ನಡಿಯೊಳಗಿನ ಚಿತ್ರಗಳು’ ಕಥೆ ಪ್ರಕಟವಾದಾಗ, ಈ ಹಿಂದೆ ಬರೆದ ಎಲ್ಲ ಕಥೆಗಳಿಗಿಂತ ತೀರಾ ಭಿನ್ನವಾಗಿ ಬರೆದಿದ್ದಿ. ಈ ರೀತಿಯ ಹೊಸತನ ಕನ್ನಡ ಕಥಾ ಲೋಕಕ್ಕೆ ಅವಶ್ಯ ಎಂಬುದನ್ನು ಅನೇಕ ಗೆಳೆಯರು ನನ್ನೊಂದಿಗೆ ಹಂಚಿಕೊಂಡಿದ್ದರು. ಆ ಕಥೆ ಇನ್ನೇನು ತಿಂಗಳ ಕಥೆಯಾಗಿ ಆಯ್ಕೆಯಾಗುತ್ತೆ ಎಂದೇ ಹಲವು ಗೆಳೆಯರು ಕನಸು ಕಟ್ಟಿದ್ದರು. ರನ್ನರ್ ಅಪ್‌ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಆ ಕಥೆಯ ಬಗ್ಗೆ ಹಿರಿಯ ವಿಮರ್ಷಕರಾದ ಎಚ್.ಎಸ್.ರಾಘವೇಂದ್ರರಾವ್ ಬರೆದದ್ದು ಹೀಗೆ... "ಅತಿ ನಿಕಟವಾದ ವರ್ತಮಾನವನ್ನು ತೆಗೆದುಕೊಂಡು ಕಥೆ ಬರೆಯುವುದು ದೊಡ್ಡ ಸವಾಲು. ’ಕನ್ನಡಿಯೊಳಗಿನ ಚಿತ್ರಗಳು’ ಕಥೆಯು ಇಂತಹ ಸವಾಲನ್ನು ಸ್ವೀಕರಿಸುತ್ತದೆ. ಇದರಲ್ಲಿ, ಕಲಾವಿದನೂ ಆದ ನಕ್ಸಲೀಯನು ತನ್ನ ಕಲೆ ಮತ್ತು ಮಾನವೀಯತೆಗಳ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಾನೆ. ಆದರೆ, ಅವನ ವರ್ತನೆಯ ಹಿಂದೆ ಯಾವುದೇ ಅಜೆಂಡಾ ಕಾಣಿಸುವುದಿಲ್ಲ. ಬದಲಾಗಿ ಅಲ್ಲಿ ಹುಂಬವೆನ್ನಿಸುವ ಒಳ್ಳೆಯತನವಿದೆ. ವ್ಯವಸ್ಥೆಯ ಕ್ರೌರ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಈ ಕಥೆಯಲ್ಲಿ ಭೀಭತ್ಸ, ಮಾನವತೆ ಮತ್ತು ಕ್ರೌರ್ಯಗಳ ಓವರ್‌ಡೋಸ್ ಇರುವುದರಿಂದ ಕಥೆಯ ವಾಚನೀಯತೆಯು ಕಡಿಮೆಯಾಗುತ್ತದೆ. ಆದರೂ ಇದು ಹಲವು ಸಾಧ್ಯಗಳನ್ನು ಪಡೆದಿರುವ ಕಥೆ.’
ಇನ್ನೂ ಉಳಿದ ಎಲ್ಲ ಕಥೆಗಳ ಬಗ್ಗೆ ಹೀಗೆ ಹೇಳಲಾಗಿದ್ದರೂ ನನ್ನನ್ನು ಬಹುವಾಗಿ ಕಾಡಿ ಬರೆಸಿದ ಕಥೆಯೆಂದರೆ ’ಎರಡು ಪಾರಿವಾಳಗಳು’. ಅಬ್ಬಾ ಕಥೆಯನ್ನು ನಾನೇ ಬರೆದನೊ? ಇಲ್ಲಾ ಆ ಎರಡು ಪಾರಿವಾಳಗಳೇ ಬರೆಯಿಸಿದವೊ? ಗೊತ್ತಿಲ್ಲ. ಯುದ್ಧೋತ್ಸಾಹಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳ ಜೊತೆಗೆ ಕಣ್ಣ ಮುಂದೆಯೇ ಮನುಷ್ಯ ಸಹಜ ಪ್ರೀತಿಯ ದಾರಿಯನ್ನು ಹುಡುಕಿವೆ ಈ ಎರಡು ಪಾರಿವಾಳಗಳು. ಹಾಗೆಯೇ ’ದೊಡ್ಡವರ ನಾಯಿ’, ’ಒಂದು ಸಹಜ ಸಾವು’ ಇವತ್ತಿನ ರಾಜಕೀಯ, ಸಾಮಾಜಿಕ ಕಲುಷಿತ ಮನಸುಗಳ ಬಗ್ಗೆ ವಿಷಾದ ಮೂಡಿಸುವ ಜೊತೆಗೆ ನಾವೆತ್ತ ಸಾಗಬೇಕು ಎಂಬ ಸೂಕ್ಷ್ಮಗ್ರಹಿಕೆಯನ್ನು ಕಥಾ ಹಿನ್ನೆಲೆಯಲ್ಲಿ ಅಂಗೈ ಗೆರೆಗಳಂತೆ ತೋರಿಸುತ್ತದೆ. ಕೊನೆಯ ಚಿಕ್ಕ ಕಥೆ ಕಥೆಗಾರನೊಂದಿಗೆ ಸುತ್ತ ಮುಸುಕಿರುವ ಕತ್ತಲೆ ನಡೆಸಿರುವ ಸಂವಾದವಿದೆ. ನನ್ನಂತವನಲ್ಲಿರಬಹುದಾದ ಹಮ್ಮು ಬಿಮ್ಮುಗಳನ್ನು ಮುಕ್ತವಾಗಿ ಕತ್ತಲೆ ಪ್ರಶ್ನಿಸಿದೆ. ಹೀಗೆ ಏನೇ ಹೇಳಿದರೂ ’ಕಥಾ ಸಂಕಲನ’ ಓದುವ, ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಲ್ಲದೆ ಮತ್ಯಾರಿಗಿದೆ ಹೇಳಿ? ಹಾಗೆ ನಿಮಗೆ ಅನ್ನಿಸಿದ್ದನ್ನು ನನಗೆ ನೇರವಾಗಿ ಹೇಳಿ ಇಲ್ಲಾ, ಮೇಲ್ ಮಾಡಿ. ತಪ್ಪದೇ ಓದಿ, ಮುಂದಿನ ದಿನಗಳಲ್ಲಿ ತಪ್ಪದೇ ಪಾಲಿಸುತ್ತೇನೆ. ಯಾಕೆ ಹೀಗೆಲ್ಲಾ ಹೇಳುತ್ತೇನೆ ಅಂದರೆ... ನಾನು ನಿಮ್ಮೆಲ್ಲರ ಪ್ರೀತಿ ಅಂಗೈಯಲ್ಲಿ ಅರಳಬೇಕಿದೆ. ಘಮಘಮಿಸಬೇಕಿದೆ. ಇದರೊಂದಿಗೆ ಆಮಂತ್ರಣ ಪತ್ರಿಕೆ ಅಂಟಿಸಿರುವೆ. ಸಾಧ್ಯವಿದ್ದರೆ ಬನ್ನಿ. ಬಾರದಿದ್ದರೂ ಬೇಸರವಿಲ್ಲ. ಹೇಗೆ ಸಂಪರ್ಕಿಸಿದರೂ ನಾನಂತೂ ಅತೀವ ಖುಷಿ ಅನುಭವಿಸುತ್ತೇನೆ.
ಗುಲ್ಬರ್ಗದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ನಿ. ತನ್ನ ಉದ್ಘಾಟನಾ ಸಮಾರಂಭ ಮತ್ತು ಪ್ರಕಾಶನದ ಮೊದಲ ಬಾರಿಗೆ ನನ್ನ ’ಮಾಮೂಲಿ ಗಾಂಧಿ’ ಕಥಾ ಸಂಕಲನ ಸೇರಿದಂತೆ ಚಂದ್ರಕಾಂತ ಕುಸನೂರು ಅವರ ’ಸುರೇಖಾ ಮ್ಯಾಡಂ ಎಂಬ ನಾಟಕ, ಡಾ.ಪ್ರಭು ಖಾನಾಪುರೆ ಬರೆದ ’ದೃಷ್ಟಿ’ ಕವನ ಸಂಕಲನ ಮತ್ತು ಸಹ ಕಥೆಗಾರ್ತಿ ಕಾವ್ಯಶ್ರೀ ಮಹಾಗಾಂವಕರ್ ಬರೆದ ’ಬೆಳಕಿನೆಡೆಗೆ’ ಕಥಾ ಸಂಕಲನ ಬಿಡುಗಡೆಗೊಳ್ಳುತ್ತಿವೆ. ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪ ಹತ್ತಿರದ ಶ್ರೀ ರೇಣುಕಾಆರ್ಯ ಕಲ್ಯಾಣ ಮಂಟಪದಲ್ಲಿ ಪುಸ್ತಕಗಳ ಬಿಡುಗಡೆ. ಬೆಳಿಗ್ಗೆ ೧೦ಕ್ಕೆ. ತಪ್ಪದೇ ಬನ್ನಿ. ಅಂದ ಹಾಗೆ ಸಂಸದ ಕೆ.ಬಿ.ಶಾಣಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಡಾ.ಮಲ್ಲೇಪುರಂ ಜಿ.ವೆಂಕಟೇಶ ಪುಸ್ತಕಗಳನ್ನು ಬಿಡುಗಡೆಮಾಡುವರು. ಗುವಿಗು ಕುಲಪತಿ ಡಾ.ಬಿ.ಜಿ.ಮೂಲಿಮನಿ ಅಧ್ಯಕ್ಷತೆವಹಿಸುವರು. ಡಾ.ಸ್ವಾಮಿರಾವ್ ಕುಲಕರ್ಣಿ ಪುಸ್ತಕಗಳನ್ನು ಪರಿಚಯಿಸುವರು. ಕನ್ನಡನಾಡು ಲೇಖಕರ ಬಳಗದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಮತ್ತು ಉಪಾಧ್ಯಕ್ಷ ಡಾ.ಡಿ.ಬಿ.ನಾಯಕ ಅವರು ಸೇರಿದಂತೆ ನೀವೂ ಇರುತ್ತೀರಿ ಎಂದೇ ತಿಳಿದಿದ್ದೇನೆ.

ತಪ್ಪದೇ ಸಂಪರ್ಕಿಸಿ, ಕಥಾ ಸಂಕಲನ ಓದಿ ಬೆನ್ತಟ್ಟಿ...

ನಿಮ್ಮ ಪ್ರೀತಿಯ ಬಯಸುತ್ತಾ...

ಕಲಿಗಣನಾಥ ಗುಡದೂರು

ಸಂಪರ್ಕ
ಕಲಿಗಣನಾಥ ಗುಡದೂರು
ಇಂಗ್ಲಿಷ್ ಉಪನ್ಯಾಸಕ
ಸಂಕೇತ ಪಿ.ಯು.ಕಾಲೇಜ್,
ಸಿಂಧನೂರು-೫೮೪೧೨೮
ಜಿಲ್ಲೆ: ರಾಯಚೂರು
ಮೊ: ೯೯೧೬೦೫೧೩೨೯

Wednesday 25 February 2009



ನಮ್ಮೆಲ್ಲರ ಪ್ರೀತಿಯ ಗೆಳೆಯ ಸಿದ್ದು ನ ಮೊದಲ ಕವನಸ೦ಕಲನ ಬರುತ್ತಿದೆ.ಅವನಿಗೆ ಎಲ್ಲರ ಪರವಾಗಿ ಅಭಿನ೦ದನೆಗಳು.ಆ ಸಂಕಲನಕ್ಕೆ ಜಿ.ನ್.ಮೋಹನ್ ಸರ್ ಬರೆದ ಬೆನ್ನುಡಿ ಮತ್ತು ಸೃಜನ್ ರ ಕವರ್ ಪೇಜ್ ಇಲ್ಲಿದೆ.



ಕವಿತೆಯೆಂಬ ಬೆಳಕಿನ ಬೀಜ....

ಇವು ಕತ್ತಲ ದಿನಗಳು. ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೆತ್ತಿರುವ ದಿನಗಳು. ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿರುವ ದಿನಗಳು. ಮುಖ ಮುಖವೂ ಮುಖವಾಡವ ಹೊತ್ತು ನಿಂತ ಹಾಗಿರುವ ಕಾಲ. ಇಂತಹ ದಿನಗಳಲ್ಲಿ ಕವಿತೆಯೆಂಬ ಬೆಳಕಿನ ಬೀಜವನ್ನು ಹಿಡಿದು ನಿಂತಿರುವ ಹುಡುಗ-ಸಿದ್ಧು ದೇವರಮನಿ.

’ಕತ್ತಲ ಕೂಪದ ಮನೆಗಳೆದಿರು ನಿಂತಿರುವ, ಚಂದಿರನ ಬೆಳಕನ್ನು ಈವರೆಗೂ ಕಂಡಿಲ್ಲದ’ ಸಿದ್ಧು ಬರುವ ನಾಳೆಗಳ ಬಗ್ಗೆ ಚಿಂತಿಸುವ ಕವಿ. ಈತನ ಒಳಗಣ್ಣು ಸಂಚರಿಸುವ ದಾರಿಗಳನ್ನು ಕಂಡು ನಾನು ಬೆರಗಾಗಿದ್ದೇನೆ.

ಷರೀಫಜ್ಜನನ್ನು ಗೋರಿಯಿಂದೆಬ್ಬಿಸಿ ಯುದ್ಧ ಜಾರಿಯಲ್ಲಿರುವ ಊರಿಗೆ ಕರೆದೊಯ್ಯುವ ಛಾತಿ ಈ ಹುಡುಗನಿಗಿದೆ. ಯುದ್ಧವೇ ಕೊನೆಯ ನಿರ್ಧಾರ ಎನ್ನುವವರನ್ನು ಮನುಷ್ಯರನ್ನಾಗಿಸುವ ಕೆಲಸ ನನ್ನದು ಎಂದು ಈತ ಭಾವಿಸಿದ್ದಾನೆ. ಮನೆ ಮನೆಗೂ ಬಣ್ಣ ಬಳಿಯುವ ಪೇಂಟರ್‌ಗೇ, ಬದುಕು ಬಣ್ಣ ಬಳಿಯುತ್ತಾ ಕುಳಿತಿರುವುದು ಈತನಿಗೆ ಮಾತ್ರ ಕಾಣುತ್ತದೆ.

ಸಿದ್ಧು, ಕತ್ತಲ ದಾರಿಗಳಲ್ಲಿ ನಡೆಯುತ್ತಾ ಕಳೆದು ಹೋಗುವವನಲ್ಲ ಈತ ಕತ್ತಲ ಮಧ್ಯೆ ಬೆಳಕಿಗಾಗಿ ಹೊರಟ ಪಯಣಿಗ.
ಕವಿತೆಯೆಂಬ ಬುಡ್ಡಿದೀಪ ತನ್ನ ಸುತ್ತಲಿನ ಕತ್ತಲನ್ನು ಒಂದಿಷ್ಟು ಕಾಲವಾದರೂ ಇಲ್ಲವಾಗಿಸುತ್ತದೆ ಎಂಬ ಭರವಸೆ ಹೊತ್ತ ಹುಡುಗ.

"ನನಗೀಗ ಬೆಳಕಿನದೇ ಧ್ಯಾನ...
ಕಟ್ಟಿಕೊಳ್ಳಬಹುದಾದ ’ಆಕಾಶ ಬುಟ್ಟಿ’ಗೆ
ಆರದ ಬೆಳಕನ್ನು ಹುಡುಕುತ್ತಿದ್ದೇನೆ.

ನಾನೂ ಬೆಳಕಾಗಬೇಕು"

ಎನ್ನುವ ಸಿದ್ಧು, ಬರುವ ನಾಳೆಗಳಿಗೆ... ಉಸಿರು ಹಚ್ಚುವ ಕವಿ.

-ಜಿ. ಎನ್. ಮೋಹನ್

Sunday 22 February 2009

ಶಿವ ಶಿವ...ಶಿವರಾತ್ರಿ




ಮತ್ತೊ೦ದು ವರ್ಷ ಮತ್ತೊಂದು ಶಿವರಾತ್ರಿ.ಕೊಟ್ಟೂರು ಜಾತ್ರೆ ಜೊತೆಜೊತೆಗೆ ಬರುವ ಶಿವರಾತ್ರಿ ಎಂದರೆ ಸಣ್ಣವರಾಗಿದ್ದಾಗ ನಮಗೆ ತುಂಬ ಖುಷಿಯಾಗುತ್ತಿತ್ತು,ಮಂಡಕ್ಕಿ ಒಗ್ಗರಣೆ,ಎಲ್ಲಾ ರೀತಿಯ ಹಣ್ಣುಗಳು ಊ೦.. ಅದರ ಮಜಾನೇ ಬೇರೆ.ಇವತ್ತು ಮಾರ್ಕೆಟ್ ಗೆ ಹೋದ್ರೆ ಯಾವುದು ಕೈಗೆಟಕೋ ಬೆಲೆಗೆ ಸಿಕ್ತಾಯಿಲ್ಲ.ಆದ್ರೂ ಜನರ ಸ೦ಭ್ರಮಕ್ಕೇನೂ ಕೊರೆತೆಯಿಲ್ಲ.ಸರಿ ಬಿಡಿ ಅದೆನೇ ಇದ್ರು ಬ್ಲಾಗ್ ನ ಎಲ್ಲಾ ನೋಡಗರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು.

Saturday 14 February 2009

ವಾಲಂಟೈನ್ಸ್ ಡೇ ಎಂಬ ರಾಮಾಯಣ





ಮಾಯದ ಜಿಂಕೆಯ ಬೆನ್ನತ್ತಿ ಹೋದ ರಾಮ ಸೀತೆಯನ್ನು ಕಳೆದು ಕೊಂಡು ಬಿಟ್ಟ. ಅತ್ತ ಜಿಂಕೆಯೂ ಇಲ್ಲ, ಇತ್ತ ಸೀತೆಯೂ ಇಲ್ಲ. ಸೀತೆಗೆ ಈ ಮಾಯದ ಜಿಂಕೆ ಕಾಣಿಸಿಕೊಂಡು ಪ್ರಲೋಭ ಒಡ್ಡಿರುವ ಬಗ್ಗೆ ರಾಮನಿಗೆ ಅತ್ಯಂತ ಖೇದವಾಗಿತ್ತು.
ಸೀತೆ ಕೆಲವು ಸುಳಿವುಗಳನ್ನು ಬಿಟ್ಟು ಹೋಗಿದ್ದರಿಂದ ಅವಳು ಲಂಕಾ ಪಟ್ಟಣದಲ್ಲಿ ರಾವಣನ ಸೆರೆಯಲ್ಲಿದ್ದಾಳೆ ಎಂದು ರಾಮ ಗೊತ್ತು ಮಾಡಿಕೊಂಡ.
ಹೊಸದಾಗಿ ಶಿಷ್ಯನಾಗಿದ್ದ ಹನುಮನಿಗೆ ಸೀತೆಯ ಮಾಹಿತಿ ತರಲು ಕಳಿಸಿಕೊಟ್ಟು ಕಾಯುತ್ತಾ ಕುಳಿತ.
ವಾಯುಪುತ್ರ ಹನುಮ ಆಕಾಶ ಮಾರ್ಗದಲ್ಲಿ ಸಂಚರಿಸುವಾಗ ಆತನಿಗೆ ದಾರಿಯೂದ್ದಕ್ಕೂ ಮಿಸ್ ಆದ ಎಸ್.ಎಂ.ಎಸ್.ಗಳು, ವಿವಿಧ ಚಾನೆಲ್‌ಗಳ ಅಂತರಾತ್ಮಗಳು, ದಾರಿ ತಪ್ಪಿಸಿಕೊಂಡ ಈಮೇಲ್‌ಗಳು ಢಿಕ್ಕಿ ಹೊಡೆದು ಮಾಹಿತಿ ತಂತ್ರಜ್ಞಾನದ ಯುಗಕ್ಕೆ ಕರೆದುಕೊಂಡು ಹೋದವು. ತಕ್ಷಣವೇ ನಮ್ಮ ಹನುಮ ಮಿಸ್ಟರ್ ಹನುಮಂತ್ ಆಗಿ ಬಿಟ್ಟ. ಐಟಿ, ಬಿಟಿ ಲೋಕದಲ್ಲಿ ಹರಡಿ ರಾಮ-ಸೀತೆ, ರಾವಣನ ಲೋಕವೆಲ್ಲಾ ಸಿಲಿಕಾನ್ ಸಿಟಿಯಾಗಿ ಬಿಟ್ಟಿತು.
ಅಂತೂ ಕೊನೆಗೆ ಸೀತೆ, ರಾಮ ಇಬ್ಬರು ಸಂಧಿಸುವಲ್ಲಿ ಮಿಸ್ಟರ್ ಹನುಮಂತ ಯಶಸ್ವಿಯಾಗಿ ಬಿಟ್ಟ.
ಅದೊಂದು ದಿನ ಸೀತೆಯೊಂದಿಗೆ ಮಿಸ್ಟರ್ ಹನುಮಂತ್ ಬ್ರಿಗೇಡ್ ರಸ್ತೆಯಲ್ಲಿ ರಾಮನ ದಾರಿ ಕಾಯುತ್ತಾ ನಿಂತರು.
ಈ ನಡುವೆ ರಾಮನಿಗೆ ಎಲ್ಲಾ ವರ್ತಮಾನ ಈ ಮೇಲ್ ಮೂಲಕ ಗೊತ್ತಾಗಿ, ಎಸ್.ಎಂ.ಎಸ್.ದಾರಿ ಕಾಯುತ್ತಾ ರಿಲ್ಯಾಕ್ಸ್ ಆಗಿ ಪಬ್‌ಗೆ ನುಗ್ಗಿ ಒಂಚೂರು ಬಂಗಾರದ ದ್ರವದಿಂದ ನಾಲಿಗೆ ತೇವ ಮಾಡಿಕೊಂಡ. ಪಬ್‌ನಲ್ಲಿ ಹುಡುಗ-ಹುಡುಗಿಯರು ಡ್ಯಾನ್ಸ್ ಮಾಡೋವುದನ್ನು ನೋಡಿ, ತಾನು ಇಂತಹ ಪಬ್ ಒಂದರಲ್ಲಿಯೇ ಸೀತೆಯನ್ನು ಭೇಟಿಯಾಗಿದ್ದು, ಭೇಟಿ ನಂತರ ಪ್ರೀತಿಗೆ ಹೊರಳಿದ್ದು, ಅವಳು ತನ್ನ ಕಷ್ಟವನ್ನು, ಇವನು ತನ್ನ ಕಷ್ಟವನ್ನು ಹಂಚಿಕೊಂಡಿದ್ದು, ಇಬ್ಬರೂ ಬಾಳು ಹಂಚಿಕೊಳ್ಳಲು ನಿರ್ಧರಿಸಿ ಮದುವೆಯಾಗಿದ್ದು. ಎಲ್ಲವೂ ಕನ್ನಡ ಸಿರಿಯಲ್‌ಗಳಂತೆ ನೆನಪಾದವು. ಅದೊಂದು ರಾಮಾಯಣವೇ? ಈ ಬಗ್ಗೆ ಜೋಗಿ, ವಸುಧೇಂದ್ರ, ಚೇತನಾ ಮುಂತಾದವರಿಗೆ ಕಥೆ ಬರೆಯಲು ಬಿಟ್ಟು ಬಿಡೋಣ. ನಮಗೇಕೆ ಈ ಉಸಾಬರಿ. ನಮ್ಮ ಕಥಾ ನಾಯಕ ರಾಮ ಪಬ್‌ನಲ್ಲಿ ಮೂರು ಪೆಗ್ ಹಾಕಿದಾಗ ಅಮೇರಿಕಾ ಎಂಬುದೆ ಈ ಮಾಯಾ ಜಿಂಕೆ ಎಂಬ ರೂಪಕದ ಭಾಷೆಯಲ್ಲಿ ಏನೋನು ಬುದ್ಧಿಜೀವಿ ಕವಿಯಂತೆ ತನಗೆ ತಾನೇ ಮಾತನಾಡಿಕೊಂಡ. ಅಷ್ಟರಲ್ಲಿ ಬೀಪ್ ಶಬ್ದ ನಾನು ಇನ್ನೂ ಜೀವಂತ ಇದ್ದೀನಿ ಎಂದು ಮೊಬೈಲ್ ನೆನಪು ಮಾಡಿತು.
ತಡಮಾಡದೇ ನಮ್ಮ ರಾಮ ಬ್ರಿಗೇಡ್ ರಸ್ತೆಗೆ ಬೈಕ್ ಓಡಿಸಿದ. ಸೀತೆ ಗುಲಾಬಿ ಹೂವು ಕೈಯಲ್ಲಿ ಹಿಡಿದು ’ಐ ಲವ್ ಯುವ್’ ಎನ್ನುವಂತೆ ನಿಂತಿದ್ದಳು. ರಾಮ ಹೂವು ತೆಗೆದುಕೊಂಡಾಗ ಇಬ್ಬರ ಕಣ್ಣುಗಳಲ್ಲಿ ಕಂಬನಿಯೂ, ಆನಂದಭಾಷ್ಪವೋ ಅಂತೂ ಇಬ್ಬರೂ ಒಬ್ಬರನ್ನೊಬ್ಬರು ಸಿನಿಮಾ ನಾಯಕ=ನಾಯಕಿಯಂತೆ ಬಿಗಿದಪ್ಪಿಕೊಳ್ಳಬೇಕು ಎಂದು ಕೊಂಡಿರುವಾಗ, ಇಂತಹ ಸನ್ನಿವೇಶವನ್ನೇ ಕಾಯುತ್ತ ಪುಳುಕಿತನಾಗಲು ಮಿಸ್ಟರ್ ಹನುಮಂತ್ ಸಿದ್ಧನಾಗಿರುವಾಗ ವಾನರ ಸೇನೆಯೊಂದು ಧಾಳಿ ನಡೆಸಿ ಬಿಟ್ಟಿತು.
’ಭಾರತೀಯ ಸಂಸ್ಕೃತಿ ಉಳಿಸಿ’ ’ವಾಲಂಟೈನ್ಸ್ ಡೇಗೆ ಧಿಕ್ಕಾರ’ ಘೋಷಣೆಗಳು. ಒಂದು ಕೈಯಲ್ಲಿ ರಾಖಿ ಮತ್ತೊಂದು ಕೈಯಲ್ಲಿ ಕರೀಮಣಿ ಸರ ಹಿಡಿದುಕೊಂಡಿದ್ದ ಗಡುವನೊಬ್ಬ ರಾಮನಿಗೆ ಒಂದೇಟು ಕೊಟ್ಟವನೇ ಯಾವದು ಬೇಕು ಎಂಬಂತೆ ಎರಡನ್ನೂ ಮುಖದ ಮುಂದೆ ಆಡಿಸಿದ. ಈ ನಡುವೆ ಸೀತೆಯನ್ನು ಎಳೆದಾಡುತ್ತಾ ಹಲ್ಲೆ ನಡೆಸಿ ಭಾರತೀಯ ಸಂಸ್ಕೃತಿ ಉಪದೇಶ ನೀಡಿದ ವಾನರರು ಅಡ್ಡ ಬಂದ ಮಿಸ್ಟರ್ ಹನುಮಂತ್‌ನಿಗೆ ಬ್ರೋಕರ್ ನನ್ನ ಮಗನೇ ಎಂದೇ ಒಬ್ಬರಮೇಲೊಬ್ಬರು ಲಾಥು ಹಾಕಿ, ನೆಲಕ್ಕೆ ಕೆಡವಿದ್ದರು. ರಾಮ ಸೀತೆಗೆ ತಾಳಿ ಕಟ್ಟಿದನೇ? ಅಥವಾ ರಾಖಿ ಕಟ್ಟಿದನೋ? ನಮ್ಮ ಪೊಲಂಕಿ ಬದುಕಿದ್ದರೆ ಇನ್ನೊಂದು ಪೊಲಂಕಿಯಾಣ ಬರೆದು ಬಿಡುತ್ತಿದ್ದರು. ಹೀಗೆ ’ವಾಲಂಟೈನ್ಸ್ ಡೇ ರಾಮಾಯಣ’ ಎಂಬ ದಕ್ಷಿಣ ಕಾಂಡ ಆರಂಭವಾಯಿತು.
- ಪರಶುರಾಮ ಕಲಾಲ್
February 14, 2009 12:13 AM

Wednesday 11 February 2009

ಮಾತಂಗ ಬೆಟ್ಟದ ನಡುವಲ್ಲಿ ನಿಂತು




ಇಲ್ಲಿ
ನಿಂತು ನೋಡಿದರೆ ಎಂದೂ ನೋಡದಂತೆ
ಹಂಪೆ - ರಥಬೀದಿ ಇಕ್ಕೆಲಗಳಲ್ಲಿ ಹಾಳು
ಮಂಟಪಗಳ ನಡುವೆ ಗೋಡೆ ಎದ್ದ ಮನೆ,
ಎದುರಿನಲಿ ವಿರೂಪಾಕ್ಷ ರಾಜ
ಗೋಪುರದ ಹೊಂಬೆಳಕು, ಕಳಶ ಕಾಯುವ ಕಾಯಕದಿ
ಕಾಲು ಸೋತು ಮುದುರಿದ ಬಸವ ಎದುರು.

ಬದಿಯಲ್ಲಿ ಬಡವಿ ಲಿಂಗ ಮುಳುಗಿ
ಪಕ್ಕದ ಉಗ್ರ -
ನಾರಸಿಂಹನ ಮೊಗದಲ್ಲಿ ನಗೆಯೇ ?
ಸಾಸಿವೆ ಕಡಲೆ ಗಣಪಗಳ ನೋಡುತ್ತಾ ನಿಂತ
ಉದ್ಧಾನ ವೀರಭದ್ರನ ಮುಂದೇ
ತಳಭದ್ರವಿಲ್ಲದವರ ರಸಬಜಾರಿನ ಖಾಲಿ
ಮಂಟಪ ಹರಡಿ - ಕೋಟೆ ಬಾಗಿಲ ತಿರುವು
ಹಿರಿ ಬಂಡೆಗಳ ಮುರುವುಗಳ ಮಧ್ಯೆ
ಗುಡಿಯಲ್ಲಿ ಕೃಷ್ಣನಿಲ್ಲ, ಅಚ್ಯುತನೂ. . .

ಮೋಡ ಮುಸುಕುದ ಮುಂಜಾನೆ ಬಂಡೆ
ಹತ್ತಲಾಗದೇ ಬೆಟ್ಟದ ನಡುವಲ್ಲಿ ನಿಂತ ಉಬ್ಬುಸ -
ಗೆಳೆಯ, ಹತ್ತಿ ನೆತ್ತಿ ಮೇಲೆ ಕರೆವ
ಗೆಳತಿಯರ ಆ ಹೊತ್ತು
ಪಟಪಟಿಸುವ ರೆಕ್ಕೆ ಬಿಚ್ಚಿ ನಿಸೂರಾಗಿ
ಹಾರಿ ಯಂತ್ರೋದ್ಧಾರಕನ ತಾಗಿ, ಪುರಂದರನ ಕೂಗಿ,
ವಿಜಯ ವಿಠ್ಠಲನ ಮುಂದೆ ಕೋದಂಡ ರಾಮ. . .
ರಾಮ ರಾಮ ಅದೇ ರಾಮ ಹಜಾರ -
ರಾಮ !

ಇದೇನೇ ಹಂಪೆ ?
ಮಾತಂಗದ ಮಧ್ಯದಿಂದ ಕಂಡುದು :
ಅಲ್ಲಿ ಆನೆಯ ಲಯವಿಲ್ಲದ, ಖರಪುಟದ ಸದ್ದಿಲ್ಲದ
ದಾರಿಯಲ್ಲಿ ಧೂಳೆದ್ದು ಮೇಲೆ ಬಿಸಿಲು - ಮುಸುಕು.

ಮುಸುಕು ಸರಿಸಿದರೆ ;
ಇಲ್ಲಿ ಅನಂಗನೆಯರು ಅನಂಗನಾಟದಲ್ಲಿ ಮಿಂಚಿ
ಸ್ನಾನ ಗೃಹದಲಿ ಮಿಂದು ಗೆಜ್ಜೆ ಇನಿದನಿ
ಕೈಬಳೆ ಸದ್ದಿಗೆ ಪುಷ್ಕರಿಣಿಯ ಪುಲಕ.
ಸರಿವ ಮೋಡದ ನೆರಳು ನಿಂತು ನಿಂತು
ನಡೆದಂತೆ ನಜರೆ ಸಲಾಮೆನ್ನುವ ಸೈನಿಕರ ರಾವು
ಮಾನವಮಿ ದಿಬ್ಬದ ಠಾವು.

ಬೆಟ್ಟದ ನಡುವಲ್ಲಿ ನಾ ಕಂಡ ಹಂಪೆ :
ಹರೆಯದವಳಲ್ಲ.
ಎಂದೋ ಬೈತಲೆ ಕೆದರಿ
ಹಣೆ ಬೆವರು ಕುಂಕುಮ ಕದಡಿ
ಮೂಗುತಿಯಲಿ ಬೆವರು ಕರೆಗಟ್ಟಿ
ಮರೆಸಿ ಮಿಂಚು, ಹರಿದ ರವಿಕೆ, ನೆರಿಗೆ ಮರೆತ
ಸೀರೆಯಲಿ ಮುದುಡಿದಂತೆ ಮಾತೆ,
ಮಾತಂಗ ಜಾತೆ.

ಅವಳ ಉಸಿರಿನ ಬಿಸಿಬಿಸಿ ಅಲೆ
ಬಂಡೆಗಪ್ಪಳಿಸಿ, ಬೆಳಕ ತೋಯಿಸಿದ ಆರ್ದ್ರತೆ.
ಕಂಗಳಲ್ಲಿ ಮೋಡ ಮುಸುಕುದ ಹಗಲು
ಧೀಂಗುಡುವ ದುಗುಡ.

ಅವಳು ಅಳುವುದಿಲ್ಲ - ಕರೆಯುತ್ತಾಳೆ
ಎಂದೂ ಮಲಗುವುದಿಲ್ಲ - ಜಾಗರಿಸುತ್ತಾಳೆ

ಮಾತಂಗ ಬೆಟ್ಟದ ನಡುವೆ ನಿಂತು
ನೋಡಿದರೆ - ಬೆಳಗಿನ ಹಂಪೆ ;
ಆಗಷ್ಟೇ ಮಿಂದು ಶ್ರೀಮುಡಿ ಕಟ್ಟಿದ ತಾಯಿ
ಹಣೆಯ ಬೊಟ್ಟಿಗೆ, ಬಿಸಿಲ ರಾವುತನೊಟ್ಟಿಗೆ
ಬಾಳಿ, ಗಾಳಿಗೊರಗಿದ ದೀರ್ಘ ಮುತ್ತೈದೆ.

- ಆನಂದ್ ಋಗ್ವೇದಿ

Monday 9 February 2009

ಗ್ರಾಮಸ್ಥರೆಲ್ಲ ಗ್ರಾಮ ತೊರೆಯುವ ಗುಳೇಲಕ್ಕಮ್ಮ ಜಾತ್ರೆ





ನಾಡಿನಲ್ಲಿ ಹಲವಾರು ಜಾತ್ರೆಗಳಿವೆ. ಆದರೆ ಗ್ರಾಮಕ್ಕೆ ಗ್ರಾಮವೇ ಗುಳೇ ಹೋಗುವ, ಗ್ರಾಮವೆಲ್ಲ ಖಾಲಿಯಾಗಿರುವ ಜಾತ್ರೆ ನಡೆಯುವುದು ಅಪರೂಪ ಹಾಗೂ ವಿಶೇಷ.
ಈ ಜಾತ್ರೆಯ ವಿಶೇಷವೆಂದರೆ ಗ್ರಾಮಸ್ಥರೆಲ್ಲ ಒಂದು ದಿನದ ವ್ಮಟ್ಟಿಗೆ ಗ್ರಾಮ ತೊರೆಯುತ್ತಾರೆ. ಅದಕ್ಕೆಂದೇ ಇದಕ್ಕೆ ಗುಳೇ ಲಕ್ಕಮ್ಮ ಜಾತ್ರೆ ಎಂಬ ಹೆಸರು. ಗ್ರಾಮದಿಂದ ಹೊರಹೋಗುವ ಗ್ರಾಮಸ್ಥರು ಹೊರವಲಯದ ಹೊಲ, ತೋಟ, ಶಾಲೆಗಳ ಕೊಠಡಿ, ಗಿಡ-ಮರಗಳ ಕೆಳಗೆ ವಾಸ್ತವ್ಯ ಹೂಡುತ್ತಾರೆ.
ಗುಳೇಲಕ್ಕಮ್ಮ ಜಾತ್ರೆಯನ್ನು ಎಂದು ಆಚರಿಸಲಾಗುವುದು ಎಂದು ಗ್ರಾಮದಲ್ಲಿ ಮೊದಲೇ ಸಾರಲಾಗುವುದು. ಅಂದು ಬೆಳಿಗ್ಗೆ ದೈನಂದಿನ ಕಾರ್ಯಗಳು ಮುಗಿದನಂತರ. ಗ್ರಾಮಸ್ಥರು ತಮ್ಮ ಕುಟುಂಬ ಸಮೇತರಾಗಿ (ತಮ್ಮ ಸಾಕುಪ್ರಾಣಿಗಳನ್ನೂ ಸಹ ಕರೆದುಕೊಂಡು) ಗ್ರಾಮದ ಹೊರವಲಯದಲ್ಲಿ ಬೀಡುಬಿಡುತ್ತಾರೆ. ಗ್ರಾಮದ ಎಲ್ಲರೂ ಮನೆ ತೊರೆದಿದ್ದಾರೆಂದು ಖಚಿತವಾದ ನಂತರ ಗ್ರಾಮದೇವತೆಯನ್ನು ಗ್ರಾಮದ ದೈವಸ್ಥರು ಪೂಜಿಸಿ, ಕೊನೆಯಲ್ಲಿ ಗ್ರಾಮದಿಂದ ಹೊರತರುತ್ತಾರೆ. ಆಗ ಇಡೀ ಗ್ರಾಮ ಖಾಲಿಯಾಗಿರುತ್ತದೆ. ಗ್ರಾಮದ ಹೊರವಲಯದಲ್ಲಿ ಯಾರೂ ಒಳಪ್ರವೇಶಿಸದಂತೆ ಮುಳ್ಳುಬೇಲಿಯನ್ನು ಹಾಕಲಾಗುತ್ತದೆ. ಅಲ್ಲಿಗೆ ಜಾತ್ರೆಯ ಒಂದು ಹಂತ ಮುಗಿದಂತೆ. ಗ್ರಾಮಸ್ಥರು ತಾವು ಬೀಡುಬಿಟ್ಟಲ್ಲೇ ಒಲೆಹೂಡಿ ಸಿಹಿ ಅಡುಗೆ ಮಾಡುತ್ತಾರೆ. ಚೆನ್ನಾಗಿ ಊಟ ಮಾಡಿ ಹರಟೆ ಹೊಡೆಯುತ್ತಾರೆ. ಯಾರಾದರೂ ಅಪರಿಚಿತರು ಗ್ರಾಮಕ್ಕೆ ಬಂದಲ್ಲಿ ಅವರನ್ನು ಒಳಬಿಡದೆ, ಅವರಿಗೆ ಜಾತ್ರೆಯ ಬಗ್ಗೆ ತಿಳಿಹೇಳಿ ತಮ್ಮಲ್ಲಿಯೇ ಕರೆದೊಯ್ದು ಉಪಚರಿಸುತ್ತಾರೆ. ಸಂಜೆಯವರೆಗೂ ಈ ಪ್ರಕ್ರಿಯೆ ನಡೆಯುತ್ತದೆ. ಸಂಜೆಯಾದೊಡನೆ ಮೊದಲಿಗೆ ಗ್ರಾಮದೇವತೆಯನ್ನು ಪೂಜಿಸಿ, ದೇವತೆಯನ್ನು ಮೊದಲು ಗ್ರಾಮದೊಳಗೆ ಕರೆದೊಯ್ಯುತ್ತಾರೆ. ಹಿಂದಿನಿಂದ ಗ್ರಾಮಸ್ಥರು ತಮ್ಮ ಸಾಕುಪ್ರಾಣಿಗೆಳೊಂದಿಗೆ ಮನೆಗಳಿಗೆ ತೆರಳುತ್ತಾರೆ. ಇದೇ ಗುಳೇಲಕ್ಕಮ್ಮನ ಜಾತ್ರೆ.
ಈ ಜಾತ್ರೆ ನಡೆಸಲು ಮುಖ್ಯಕಾರಣವೆಂದರೆ ಜಾನುವಾರುಗಳಿಗೆ, ಜನರಿಗೆ ಕಾಯಿಲೆಗಳು ಬರಬಾರದೆಂದು, ಗ್ರಾಮದೇವತೆಯ ರಕ್ಷಣೆ ತಮಗಿರಲೆಂದು ಹಿಂದಿನಿಂದಲೂ ಈ ಆಚರಣೆ ಬೆಳೆದುಬಂದಿದೆ ಎಂಬುದು ಗ್ರಾಮದ ಹಿರಿಯರ ಹೇಳಿಕೆಯಾಗಿದೆ. ಪ್ರತಿವರ್ಷವೂ ನಡೆಯುವ ಈ ಜಾತ್ರೆ ನಾಡಿನ ಜಾತ್ರೆಗಳಲ್ಲಿಯೇ ವಿಶೇಷವಾಗಿದೆ. ಅಂದಹಾಗೆ ಈ ಜಾತ್ರೆ ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಿರೇಹೆಗ್ದಾಳ್‌ನಲ್ಲಿ ನಡೆಯಿತು. ಕೂಡ್ಲಿಗಿ ತಾಲ್ಲೂಕಿನಲ್ಲಿ ಕೂಡ್ಲಿಗಿ ಹಾಗೂ ಹಿರೇಹೆಗ್ಡಾಳ್‌ಗಳಲ್ಲಿ ಮಾತ್ರ ಈ ಜಾತ್ರೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

Thursday 5 February 2009




ಗೆಳೆಯರೆ ಜಿ.ಪಿ.ಬಸವರಾಜ ಅವರು ಸದಭಿರುಚಿಯ "ತಿಂಗಳು" ಮಾಸ ಪತ್ರಿಕೆ ರೂಪಿಸುತ್ತಿದ್ದಾರೆ.ಇಂತಹ ಪತ್ರಿಕೆಯ ಜತೆ ನಾವೂ ಇರೋಣ.